?

ಎಲ್ಲರಕನ್ನಡ ಎಂದರೇನು?

ಕನ್ನಡವನಾಡುವ ಎಲ್ಲಾ ಜನರೂ ತಮ್ಮ ಬರಹಗಳಲ್ಲಿ ಬಳಸುವಂತಹ ಒಂದು ಒಳನುಡಿಯಿದೆ. ಅದೇ ಎಲ್ಲರಕನ್ನಡ.

ಎತ್ತುಗೆಗಾಗಿ, ಹುಬ್ಬಳ್ಳಿಯಿಂದ ಹೊರಬರುವ ಸಂಯುಕ್ತ ಕರ್ನಾಟಕದಲ್ಲಿ, ಬೆಂಗಳೂರಿನಿಂದ ಹೊರಬರುವ ಪ್ರಜಾವಾಣಿ ಇಲ್ಲವೇ ವಿಜಯಕರ್ನಾಟಕದಲ್ಲಿ, ಮತ್ತು ಉಡುಪಿಯಿಂದ ಹೊರಬರುವ ಉದಯವಾಣಿಯಲ್ಲಿ ಹೆಚ್ಚು ಕಡಿಮೆ ಒಂದೇ ಬಗೆಯ ಕನ್ನಡ ಬಳಕೆಯಾಗುತ್ತದೆ.

ಈ ಊರುಗಳಲ್ಲಿ ಜನರು ಬೇರೆ ಬೇರೆ ಬಗೆಯ ಆಡುನುಡಿಗಳನ್ನು ಬಳಸುವುದಿದ್ದರೂ ಸುದ್ದಿಹಾಳೆಗಳಲ್ಲಿ ಬರೆಯುವವರು ಹೆಚ್ಚು ಕಡಿಮೆ ಒಂದೇ ಬಗೆಯ ಕನ್ನಡವನ್ನು ಬಳಸುತ್ತಾರೆ. ಎತ್ತುಗೆಗಾಗಿ, ಹುಬ್ಬಳ್ಳಿಯ ಆಡುನುಡಿಯಲ್ಲಿ ಪದಗಳ ಕೊನೆಯ ಎಕಾರ ಅಕಾರವಾಗಿ ಕಾಣಿಸಿಕೊಳ್ಳುತ್ತದೆ (ಮನೆ>ಮನಿ, ಎಲೆ>ಯಲಿ, ಕಾಗೆ>ಕಾಗಿ, ಬರೆ>ಬರಿ, ಕೊಳೆ>ಕ್ವಳಿ). ಆದರೆ, ಸಂಯುಕ್ತ ಕರ್ನಾಟಕದಲ್ಲಿ ಬರೆಯುವವರು ಸಾಮನ್ಯವಾಗಿ ಪದಗಳ ಕೊನೆಯ ಎಕಾರವನ್ನು ಇಕಾರವಾಗಿ ಬದಲಾಯಿಸದೆ ಹಾಗೆಯೇ ಉಳಿಸಿಕೊಳ್ಳುತ್ತಾರೆ. ಬೆಂಗಳೂರಿನ ಹಲವರ ಆಡುನುಡಿಯಲ್ಲಿ ಪದಗಳ ಮೊದಲಿನ ಹಕಾರ ಬಿದ್ದುಹೋಗುತ್ತದೆ (ಹಣೆ>ಅಣೆ, ಹಾಲು>ಆಲು, ಹುಲಿ>ಉಲಿ, ಹೋಗು>ವಾಗು). ಆದರೆ, ಪ್ರಜಾವಾಣಿ ಇಲ್ಲವೇ ವಿಜಯಕರ್ನಾಟಕದಲ್ಲಿ ಬರೆಯುವವರು ಈ ಹಕಾರವನ್ನು ಹೆಚ್ಚಿನೆಡೆಗಳಲ್ಲೂ ಉಳಿಸಿಕೊಳ್ಳುತ್ತಾರೆ. ಕರಾವಳಿಯ ಕನ್ನಡದ ಆಡುನುಡಿಗಳೂ ಹಲವು ವಿಶಯಗಳಲ್ಲಿ ಒಳನಾಡಿನ ಆಡುನುಡಿಗಳಿಂದ ಬೇರಾಗಿವೆ; ಆದರೆ, ಉದಯವಾಣಿಯಲ್ಲಿ ಬರೆಯುವವರು ಹೆಚ್ಚಿನ ಮಟ್ಟಿಗೆ ಬೇರೆ ಸುದ್ದಿಹಾಳೆಗಳಲ್ಲಿ ಬಳಕೆಯಾಗುವಂತಹ ಒಳನುಡಿಯನ್ನೇ ಬಳಸಹೋಗುತ್ತಾರೆ.

ಸುದ್ದಿಹಾಳೆಗಳಲ್ಲಿ ಮಾತ್ರವಲ್ಲದೆ, ಬೇರೆ ಹಲವು ಬಗೆಯ ಬರಹಗಳಲ್ಲೂ ಇದೇ ಒಳನುಡಿ ಬಳಕೆಯಾಗುತ್ತದೆ: ಕತೆ-ಕಾದಂಬರಿಗಳಲ್ಲಿ ಹೆಚ್ಚಿನೆಡೆಗಳಲ್ಲೂ ಈ ಒಳನುಡಿ ಬಳಕೆಯಾಗುತ್ತದೆ; ಸೂಳುನುಡಿಗಳು (ಸಂಬಾಶಣೆಗಳು) ಬರುವಲ್ಲಿ ಮಾತ್ರ ಕೆಲವರು ಅವು ಆಡುನುಡಿಯಲ್ಲಿವೆ ಎಂಬ ಅನಿಸಿಕೆ ಬರುವ ಹಾಗೆ, ಅವುಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾರೆ. ಬೇರೆ ಹಲವು ಬಗೆಯ ಬರಹಗಳಲ್ಲೂ ಈ ಒಳನುಡಿಯ ಬಳಕೆಯನ್ನು ಕಾಣಬಹುದು. ಇದಲ್ಲದೆ, ಶಾಲೆಗಳಲ್ಲಿ ಮಕ್ಕಳಿಗೆ ಓದಲು ಮತ್ತು ಬರೆಯಲು ಇದೇ ಒಳನುಡಿಯನ್ನು ಕಲಿಸುತ್ತಾರೆ, ಮತ್ತು ಅವರ ಕಲಿಕೆಯ ಪುಸ್ತಕಗಳಲ್ಲಿ ಅದನ್ನೇ ಬಳಸುತ್ತಾರೆ.

ಹೀಗೆ, ಕರ್ನಾಟಕದಲ್ಲಿ ಎಲ್ಲರೂ ಓದಲು-ಬರೆಯಲು ಕಲಿಯುವ, ಮತ್ತು ತಮ್ಮ ಬರಹಗಳಲ್ಲಿ ಬಳಸಲು ಕಲಿಯುವ ಈ ಒಳನುಡಿಯನ್ನು ಇಲ್ಲಿ "ಎಲ್ಲರಕನ್ನಡ" ಎಂಬುದಾಗಿ ಹೆಸರಿಸಲಾಗಿದೆ. ಬರಹಗಳಲ್ಲಿ ಮಾತ್ರವಲ್ಲದೆ ಮಾತಿನಲ್ಲಿಯೂ ಈ ಒಳನುಡಿಯ ಬಳಕೆಯನ್ನು ಕಾಣಬಹುದು. ಎತ್ತುಗೆಗಾಗಿ, ಹವ್ಯಕ, ಹಾಲಕ್ಕಿ, ಗವ್ಡ ಮೊದಲಾದ ಆಡುನುಡಿಗಳನ್ನು ಮತ್ತು ತುಳು, ಕೊಂಕಣಿ, ಮರಾಟಿ ಮೊದಲಾದ ಬೇರೆ ಕೆಲವು ನುಡಿಗಳನ್ನು ಬಳಸುವ ಕರಾವಳಿಯ ಜನರು, ತಮ್ಮದಲ್ಲದ ನುಡಿ ಇಲ್ಲವೇ ಆಡುನುಡಿಗಳನ್ನು ಆಡುವವರೊಂದಿಗೆ ಮಾತನಾಡುವಾಗ, ಸಾಮಾನ್ಯವಾಗಿ ಈ ಎಲ್ಲರಕನ್ನಡವನ್ನೇ ಬಳಸುತ್ತಾರೆ. ಬೇರೆ ಕಡೆಗಳಲ್ಲೂ ಹಲವು ಸಂದರ್ಬಗಳಲ್ಲಿ (ತರಗತಿಗಳಲ್ಲಿ ಮತ್ತು ಸಬೆ-ಸಮಾರಂಬಗಳಲ್ಲಿ) ಆಡುನುಡಿಯ ಬದಲು ಈ ಎಲ್ಲರಕನ್ನಡವನ್ನೇ ಬಳಸಬೇಕಾಗುತ್ತದೆ.

ಆದರೆ, ಮಾತಿಗೂ ಬರಹಕ್ಕೂ ನಡುವೆ ಹಲವು ವ್ಯತ್ಯಾಸಗಳಿದ್ದು, ಅವು ಮಾತಿನಲ್ಲಿ ಬಳಕೆಯಾಗುವ ಎಲ್ಲರಕನ್ನಡದಲ್ಲೂ ಕಾಣಿಸಿಕೊಳ್ಳುತ್ತವೆ. ಎತ್ತುಗೆಗಾಗಿ, ಬರಹದಲ್ಲಿ ಬರುವ ಕೆಲವು ತೆರೆಯುಲಿ(ಸ್ವರ)ಗಳು ಮಾತಿನಲ್ಲಿ ಬಿದ್ದುಹೋಗುತ್ತವೆ: ಹೋಗುತ್ತೀರೋ ಎಂಬುದು ಮಾತಿನಲ್ಲಿ ಹೋಗ್ತೀರೋ ಎಂದಾಗುತ್ತದೆ. ಬರಹದಲ್ಲಿ ಬರುವ ಕೇಳ್ವಿ (?), ಕೊನೆ (.), ತಡೆ (,), ಅರೆಕೊನೆ (;) ಮೊದಲಾದ ಗುರುತುಗಳು ಮಾತಿನಲ್ಲಿ ಉಲಿಯ ಏರಿಳಿತ, ಬಿಡುವು ಮೊದಲಾದವುಗಳಾಗಿ ಕಾಣಿಸಿಕೊಳ್ಳುತ್ತವೆ.

ಇದಲ್ಲದೆ, ಮಾತಿನಲ್ಲಿ ಸೊಲ್ಲುಗಳು ಇಡಿಯಿಡಿಯಾಗಿ ಬರುವುದಕ್ಕಿಂತಲೂ ತುಂಡು ತುಂಡಾಗಿ ಬರುವುದೇ ಹೆಚ್ಚು. ಆದರೆ ಬರೆಯುವಾಗ ಅವೆಲ್ಲ ಇಡಿಯಿಡಿಯಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಮಾತಿನಲ್ಲಿ ಬರುವ ಸೊಲ್ಲುಗಳಲ್ಲಿ ತಪ್ಪುಗಳಿರುವುದು ಹೆಚ್ಚು; ಆದರೆ ಬರಹದಲ್ಲಿ ತಪ್ಪುಗಳು ಬಾರದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮಾತಿನಲ್ಲಿ ಬರುವ ಸೊಲ್ಲುಗಳು ಚಿಕ್ಕ ಚಿಕ್ಕವು; ದೊಡ್ಡವಾಗಿದ್ದರೂ ಅವು ಜೋಡಿಸಿದ ಸೊಲ್ಲುಗಳಾಗಿರುತ್ತವೆ. ಆದರೆ ಬರಹದಲ್ಲಿ ಹೆಚ್ಚಾಗಿ ಉದ್ದದ ಸೊಲ್ಲುಗಳು ಮತ್ತು ಒಳಸೊಲ್ಲುಗಳಿರುವಂತಹ ಸಿಕ್ಕಲು ಸೊಲ್ಲುಗಳು ಬರುತ್ತಿರುತ್ತವೆ. ಹಾಗಾಗಿ, ಇಲ್ಲಿ ಎಲ್ಲರಕನ್ನಡ ಎಂಬ ಹೆಸರನ್ನು ಮುಕ್ಯವಾಗಿ ಬರಹದಲ್ಲಿ ಬಳಕೆಯಾಗುವ ಒಳನುಡಿಯನ್ನು ಹೆಸರಿಸುವುದಕ್ಕಾಗಿ ಬಳಸಲಾಗಿದೆ.